Thursday, May 5, 2011

ಸಲಹೆ

ಕಾಮನಬಿಲ್ಲನು ಕಾಣದ ಕಣ್ಣಿಗೆ
ಕಾಣುವುದೊಂದೆ ಬಣ್ಣ
ಬಿಳಿಯೊಳು ಅಡಗಿದೆ ವರ್ಣ ಅನಂತವು
ನಂಬುವೆಯಾ ನೀ ನನ್ನ?
ಕಣ್ಣು ಕಂಡರೂ ಏನೂ ಕಾಣದು,
ಜೀವಕಂಟಿದ ಯಂತ್ರ
ಹುಡುಕದೇ ನೀನು, ಕಾಣುವುದೇನು?
ಅರಸಲು ಅರಸು ಸ್ವತಂತ್ರ

ತಿನ್ನದ ಮಾವಿನ ಹಣ್ಣಿನ ರುಚಿಯ
ಓದಿ ತಿಳಿದಾನೆ ಜಾಣ?
ಹುಳಿಯೊಂದಿಷ್ಟು, ಸಿಹಿಯೊಂದಿಷ್ಟು,
ತಲೆಬುಡವರಿಯದ ಜ್ಞಾನ  
ಯಾರದೋ ಮಾತು, ಅರಿವಿಗೆ ದಕ್ಕದು.
ತೇಲಿಬರುವ ದನಿ ಕ್ಷೀಣ
ಎವೆಯಿಕ್ಕದ ಮನ ಹೊರಓಡದ ದಿನ,
ಮನತುಂಬುವುದೀ ಗಾನ

ತರ್ಕ-ವಿತರ್ಕದ ಆಚೆ-ಈಚೆಯಲಿ
ಬರೆದಿಹ ಚಿತ್ರ ವಿಚಿತ್ರ
ಕಾಲೂ ಕಾಣದು, ತಲೆಯೂ ತೋರದು,
ಅರ್ಥವಾಗದೀ ಸೂತ್ರ
ಅರ್ಥದ ಸ್ವಾರ್ಥದ ಮಾತಂತಿರಲಿ
ಇದು ಪರಮಾರ್ಥದ ಚಿತ್ರ
ಬರೆದವನಾರೋ? ಅಳಿಸುವ ಮುನ್ನ
ಮನತುಂಬಿಸಿಕೋ ಮಿತ್ರ

Tuesday, March 8, 2011

ಚಿನ್ನದ ಜಿಂಕೆ


ದಶಶಿರನ ಹೆಗಲೇರಿ
ಬಂದ ಮಾಯಾಜಿಂಕೆ
ಸೀತೆಯನು ಸೆಳೆದೊಯ್ದ ಪರಿಬಲ್ಲೆಯಾ ನೀನು?
ಹೊಳೆವುದೆಲ್ಲ ಚಿನ್ನವಲ್ಲ.
ಯಾರಿಗೂ ಹೊಸತಲ್ಲ
ಜೀವಂತ ಜಿಂಕೆಯದು, ಆದರೂ ಶಂಕೆ
"ನನ್ನ ಚಿನ್ನದ ಜಿಂಕೆ!
ಹಿಡಿದು ತಾ! ತಾ ಇನಿಯ!!"
ಅರಮನೆಯ ತೊರೆದರೂ ಜಿಗಿವ ಜಿಂಕೆಯ ಆಸೆ?
"ಮೋಹದಾಣತಿ
ಶ್ರೀರಾಮನಿಗೂ ಮಿಗಿಲೆ?"
ಕವಿಕಂಡ ಇತಿಹಾಸ, ಇರಬಾರದೇಕೆ?

"ದ್ಯೂತ ರಾಯರ ಧರ್ಮ,
ಇಡು ನಿನ್ನ ಮಾನಿನಿಯ?"
ತಮ್ಮನಾಣತಿಯೊಡನೆ ಮತ್ತೆ ಬಂದಿತು ಜಿಂಕೆ
ಇದ್ದ ಕಣ್ಗಳ ಮುಚ್ಚಿ,
ತೆರೆದ ಕಿವಿಗಳನವುಚಿ
ಮತ್ತೆ ಓಡಲೇಬೇಕೆ, ಹೊಳೆವ ಜಿಂಕೆಯ ಹಿಂದೆ?
"ಇದು ನನ್ನ ಸ್ವತ್ತು,
ನಾನವನ ತೊತ್ತು"
ಹಳೆ ಚಾಳಿ, ಹೊಸ ಮಾತು, ಅನುಕೂಲ ಸಿಂಢು!
"ಕೊಳಲೂದಿದ ಮೋಹನಗೂ
ಪಾಂಚಜನ್ಯದ ಉರುಳು"
ಕವಿಕಂಡ ಇತಿಹಾಸ ಮತ್ತೆ ಬಂದೀತೇಕೆ?

ಹೊಳೆವುದೆಲ್ಲವ ಕಂಡು,
ನೆಗೆವ ಕಪಿಗಳ ಹಿಂಡು
ದುಂಡುಮೇಜಿನ ಸುತ್ತ ಮತ್ತೆ ಜಿಂಕೆಯ ದಂಡು,
ದಿನಕೊಂದು ಹೊಸ ಚರ್ಮ,
ಹೊಸ ಕೋಡು, ಹೊಸ ವೇಗ,
ಬಾಣತಾಗುವ ಮುನ್ನ ಮಾಯವಾಗುವ ಯೋಗ!
ರಾಮನಿಗೋ, ಧರ್ಮನಿಗೋ
ಎಲ್ಲ ಮರೆಯುವ ರೋಗ
ಯುಗಕೊಂದು ಹೊಸ ಹೆಸರು: ಮರೆಯಾಗದೀ ಮೋಹ
"ಅರಿವು ಮೂಡುವ ಮುನ್ನ,
ಹೊಳೆವುದೆಲ್ಲವೂ ಚಿನ್ನ!"
ಕವಿಕಂಡ ಇತಿಹಾಸ ಮತ್ತೆ ಬರದು ಯಾಕೆ!

ತೊತ್ತು - ಆಳು - ತೊತ್ತಿನ ಮಗನಿಗೆ ಇಷ್ಟು ಕೊಬ್ಬೇ?
ಉರುಳು - ನೇಣು - ಉರುಳು ಹಾಕಿಕೊಂಡು ಸತ್ತ
ಆಣತಿ - ಅಪ್ಪಣೆ -  permission

ಕಪಿಚೇಷ್ಟೆ


ತಲೆತಗ್ಗಿಸಿ ಉರುಹೊಡೆದು,
ಊರು ಬಿಟ್ಟು ನಗರ ಸೇರಿ,
ಅಲ್ಲೇ ಗೂಡು ಕಟ್ಟಿ ಗುಂಡು ಹಾಕುವ ನಮಗೆ
ಇದೊಂದು ಬಿಡಿಸಲಾರದ ಒಗಟು!
"ಖಾದಿ-ಖಾಕಿ-ಖಾವಿಯ ದರ್ಬಾರಿನಲಿ,
ಎಲ್ಲಿಂದ ಬಂತು ಈ ಒಂಟಿ ಕೋತಿ?
ಏನು ಧೈರ್ಯ? ಎಂಥ ಕಥೆ?"
ಮಾತು ಮಾತಿಗೂ ದಂತಕಥೆ
ಬಾಲಕ್ಕೆ ಬೆಂಕಿಯಿಟ್ಟರೆ ಊರೆಲ್ಲ ಸುಟ್ಟು ಕರಕುವ,
ಸಾಯಲೆಂದು ಸುಮ್ಮನಿದ್ದರೆ ಬಾಲದಿಂದ ಕೋಟೆ ಕಟ್ಟುವ
ಈ ಕೋತಿಯನ್ನು ಇಲ್ಲಿ ಬಿಟ್ಟವರಾರು?

ರಟ್ಟೆ ಹಿಡಿದಾಕ್ಷಣ ಮಾಯವಾಗುವ ಸಿಟ್ಟು,
ಕಿವಿಯಿಂದ ಕಿವಿಗೆ ಅರಳುವ ಮುಗುಳ್ನಗೆಯ ನೆರಳಲಿ ನಿಂತು
ಯಾರಿಲ್ಲದಾಗ ಸಿಡಿಯುವದು ಗುಟ್ಟಲ್ಲ:
ಬೆನ್ನಟ್ಟಿ ಬರುವ ಮೆಟ್ಟಿನ ಶಬ್ದಕ್ಕೆ,
ಗೋಡೆಯೊಳಗೇ ಅವಿತು ಆಲಿಸುವ ಕಿವಿಗಳಿಗೆ,
ಚಿತ್ತದೊಳಗೇ ಕೂತು  ಹೆದರಿಸುವ ಅಪ್ಪನಿಗೆ,
ಸುತ್ತ ಸುತ್ತುತಲಿರುವ ಮರಿಮಗನ ಕನಸುಗಳಿಗೆ
ಹೆದರಿ ಬದುಕುವ ನಾವೂ ಆಗಾಗ ಗೊಣಗುವುದುಂಟು
"ಬೇಕಿತ್ತೇ ಅವಗೆ ಜಾನಕಿಯ ಸಂಗ?"

ಇರಲಿ ಬಿಡಿ,
"ಮಾಡಿದವರ ಪಾಪ ಆಡಿದವರ ಮೇಲಂತೆ,"
ಎಂದೋ ಬರುವ ರಾಮನಿಗಿಂತ,
ಇಂದಿನ ಆರಾಮ ಮುಖ್ಯ.
ಲಕ್ಷ್ಮಿ ಪಟಾಕಿಯನ್ನೇ ಕಿವಿಗೆರಡು ಬೆರಳಿಟ್ಟು ಸಿಡಿಸುವ,
ಕುಂಬಳಕಾಯಿ ಕಡಿದು ತಿಲಕ ಧರಿಸುವ ನಮಗೆ,
ಕಪಿಚೇಷ್ಟೆ ಸಾಧುವಲ್ಲ
(ಒಳಗೆ ಕುಳಿತು ಕುಣಿದು ಕುಪ್ಪಳಿಸುವ ಕೋತಿಗೆ
ಇದು ಅರ್ಥವಾಗುವುದಿಲ್ಲ!)
ಒಮ್ಮೆ ಬರಲಿ ಬಿಡಿ ರಾಮ
ಚಪ್ಪಾಳೆ ತಟ್ಟಿ, ಮೇಜು ಕುಟ್ಟಿ,
ಕೆನ್ನೆ ತಟ್ಟಿಕೊಂಡರೆ ಮತ್ತದೇ ಆರಾಮ,
ಅಲ್ಲಿಯವರೆಗೂ ಅಲ್ಲಿಂದಿಲ್ಲಿಗೆ ಜಿಗಿಯುವ
ಈ ಕೋತಿಗೆ ಇರಬಾರದೇ ವಿರಾಮ?