Friday, December 31, 2010

ತಿಗಣೆಗಳ ಪರಿಷೆ

ತಿಗಣೆಗಳ ಪರಿಷೆ

ಕಲ್ಲಕೆತ್ತಿ, ಭಿತ್ತಿ ಬರೆಸಿ
ಮೆಲ್ಲನೆ ಅಮರನಾಗುವ ಹುಚ್ಚು
ಇಂದು-ನಿನ್ನೆಯದಲ್ಲ, ನಾಳೆ ಮುಗಿಯುವದಲ್ಲ
ಪರಿಷೆ ಬರುವ ಸಾವಿರ ತಿಗಣೆಗಳ
ಪ್ರತೀ ಸರದಾರಗೂ ಅಮರನಾಗುವ ಕನಸು
ಕೇಳಿರಬಹುದು ನೀವು,
ಹೊತ್ತಲ್ಲದ ಹೊತ್ತಲ್ಲೂ ಅರಚುವ
ಆಕಾಶವಾಣಿಯ ಬಿತ್ತರವ
"ಬಲ್ಲಿರೇನಯ್ಯಾ, ಬಲ್ಲಿರೇನಯ್ಯ,
ನಿನ್ನೆ-ನಾಳೆಗಳಿಗಿಂತ, ಇಂದಿನ ನಾನೇ ಅನಂತ"

ಕಂಡ-ಕಂಡ ಕಲ್ಲುಗಳ ಮೇಲೆಲ್ಲ ಕಂಡರಿಸಿ,
ಸೊಲ್ಲೆತ್ತಿದವರ ಸರಿಸಿ ಬದಿಗಿರಿಸಿ,
ಬರೆಸಿ, ಒರೆಸಿ, ಮತ್ತೊಮ್ಮೆ ಬರೆಸಿ,
ಬೆವರೊರೆಸುವಷ್ಟರಲ್ಲಿ ಮುಗಿದೇ ಹೋಯಿತೇ ವರುಷ,
ಮುಗಿದು ಹೋಯಿತೇ ಆ ಎರವಲಿನ ರಸನಿಮಿಷ!
ಸರತಿಯಲಿ ನಿಂತ ಆ ಅನಿಮಿಷರ ಗುಂಪು:
"ಅಯ್ಯೋ! ಈ ನಿಮಿಷ ಮುಗಿಯುವುದು ಎಂತು?
ವರುಷ ಕಳೆದೀತು ಜೋಪಾನ, ಅಮರತ್ವಕ್ಕಿದು ಸೋಪಾನ"
ಹಾಳೂರ ಪರಿಷೆಗೆ ಹೊಸ ತಿಗಣೆಗಳ ಸಾಲು,
ಹೊಸ ವರುಷ, ಹೊಸ ಸಾಲು, ಮತ್ತದೇ ಹಳೆಗೋಳು

Sunday, December 5, 2010

ಎರಡು ಮುಖ


ಅಯೋಮಯದ ದೀರ್ಘ ರಾತ್ರಿ,
ದೇವ ಕುಳಿತ ಬರೆಯಲು
ಚಿಮ್ಮಿದನೋ ನಾಣ್ಯವೊಂದ,
ನೂರೆಂಟು ಸಾಧ್ಯತೆಗಳು;


ಇಲ್ಲಿ ಹಗಲು ಅಲ್ಲಿ ರಾತ್ರಿ
ಮಧ್ಯೆ ಮುಸ್ಸಂಜೆಯು
ರಾತ್ರಿ ಹಗಲ ಮಧ್ಯೆ
ಬರೀ ಕೂಗಳತೆಯ ದೂರವು;


ಅಲ್ಲಿ ಬಿಳಿ, ಇಲ್ಲಿ ಕರಿ,
ಹಲವು ಬಣ್ಣ ತೊಗಲು
ಇಲ್ಲಿ ಬೆಣ್ಣೆ, ಅಲ್ಲಿ ಎಣ್ಣೆ,
ಮಧ್ಯೆ ಬರೀ ಸುಣ್ಣವು;


ಹೊತ್ತ ದೇಹ, ಭಾರೀ ಭಾರ,
ಅರಗಿಸಲು ಬೇಕು ಚೂರ್ಣವು
ಶಯನ ಬರೀ ಮೆತ್ತೆ-ಮೆತ್ತೆ
ಮಲಗಲು ಬೇಕು ಮಾತ್ರೆಯು!


ಸೂರ ತುಂಬ ತಾರೆ ಕಾಟ,
ಬಂತೇ ಮತ್ತೆ ಮಳೆಗಾಲವು?
ಊಟ-ನಿದ್ದೆ-ರೋಗ-ರುಜಿನ,
ಚಿಮ್ಮಿದ ನಾಣ್ಯದಲ್ಲಿಮೋಸವು
!!

ಬುದ್ಧ ನಕ್ಕನೆ?

  ಬೋಧಿವೃಕ್ಷದ ಬಾವಲಿಗಳಿಗೆ ಹೇಸಿ, ನಾಚಿ,
  ಶತಮಾನಗಳಿಂದ ಅವಿತುಕೊಂಡಿದ್ದ ಬುದ್ಧ,
  ಏಕಾಏಕಿ ನಕ್ಕನೆ?  ಇಲ್ಲಾ ಬೆಚ್ಚಿ ಬಿದ್ದನೆ?
  ಇಲ್ಲ, ಇಲ್ಲ....
  ಬುದ್ಧ ನಕ್ಕೇ ಇಲ್ಲ, ನಗಲು ಸಿಕ್ಕೇ ಇಲ್ಲ!!
  ಒಂದು ಶವಕ್ಕೇ ಹೆದರಿ ಹೈರಾಣಾದ ಬುದ್ಧ,
  ಒಂದೇ ರೋಗಿಯ ಕಂಡು ಕಂಗಾಲಾಗಿದ್ದ!
  ಒಂದು ಮುದುಕಿಯ ಕಂಡೇ ಮನ ಮುದುರಿಕೊಂಡಿದ್ದ...
  ಅವ ನಕ್ಕಿದ್ದೇಕೆ?
  ನಗಲು ಅವನೇ ಬೇಕಿತ್ತೆ?
  ಏನನು ನೆನೆದು ನಕ್ಕ?  ಯಾರನು ನೋಡಿ ನಕ್ಕ?
  ಛೆ!  ಅವನು ನಕ್ಕೇ ಇಲ್ಲ.
  ನಕ್ಕರೆ ಅತ್ತೀತು ಭೂಮಿ!
  ನಾಚಿ ತಲೆಕೆಳಗಾದೀತು ಭೋಧೀವೃಕ್ಷ!!
  ಅಣುಸ್ಫೋಟದ ಕಚಗುಳಿಗೂ
  ಅವಗೆ ನಗೆ ಬರಲಿಕ್ಕಿಲ್ಲ!!
  ಕಡುಕಪ್ಪು ನಿಟ್ಟುಸಿರು, ಕಣ್ಣೀರ ಕಾರ್ಮೋಡ
  ಮನದಿಗಿಲು, ತೊಡೆನಡುಕ
  ನಗುವ ಲಕ್ಷಣಗಳೇನು?
  ಛೆ!  ಇದು ದಾರ್ಷ್ಟ್ಯ, ಅನ್ಯಾಯ,
  ನಕ್ಕವರಾರೋ? ಅತ್ತವರೆಷ್ಟೋ?
  ಯಾರ ಹೆಸರೋ?  ಯಾರ ಬಸಿರೋ?
  ಬುದ್ಧ ನಕ್ಕೇ ಇಲ್ಲ!
  ನಕ್ಕರೆ ಬುದ್ಧನೇ ಅಲ್ಲ!!


  ಭಾರತದ ಮೊದಲ ಪರೀಕ್ಷಾರ್ಥ ಅಣು ಸ್ಫೋಟದ ಸಾಂಕೇತಿಕ ಹೆಸರು : ನಗುವ ಬುದ್ಧ ("Smiling Buddha")

Friday, December 3, 2010

ಕಾಲ


ಕಾಲ

ದೂರಕೆ ದೂರಕೆ ಹಾರುವ ನಿಹಾರಿಕೆ,
ನಿನ್ನ ಗಮನವೆಲ್ಲಿ?
ನಿನ್ನಾಗಮನವನೆ ಕೋರಿ ಕುಳಿತಿರುವೆ
ನನ್ನತನವ ಚೆಲ್ಲಿ..

ಕಲ್ಪದಾದಿಯಲಿ, ಕಾಲರಾತ್ರಿಯಲಿ
ಇರವಿನರಿವೆ ಹೊಸತು
ನಿನ್ನೊಳಗೋ ನಾನು, ನನ್ನೊಳಗೋ ನೀನು,
ನಮ್ಮೊಳಗೆ ವಿಶ್ವ ಕಲೆತು..
ಹಗಲು ರಾತ್ರಿಗಳೋ, ನಿನ್ನೆ-ನಾಳೆಗಳೋ
ಎಲ್ಲ ಒಂದೆ ನಮಗೆ.
ಸುತ್ತಿಸುರುಳಿದೆವು, ಮತ್ತೆ ಅರಳಿದೆವು
ಕೃಷ್ಣರಂಧ್ರದೊಳಗೆ.

ಯಾವುದೋ ಘಳಿಗೆ, ಕಾಣದ ಕರೆಗೆ
ನಿನ್ನ ಒಲವ ಸುರಿದೆ
ಕಾಲನನು ಹೆತ್ತು, ಕನಸುಗಳ ನೆಟ್ಟು.
ನೀಲ ನಭದಿ ಜಿಗಿದೆ..
ದಿನಕೊಂದು ಬಣ್ಣ, ನೀ ಮರೆತೆ ನನ್ನ,
ನಿಂತಲ್ಲೇ ನಾನು ಕುಸಿದೆ
ಅಗಲಿಕೆಯ ಸುಳಿಗೆ, ಅವಮಾನದುರಿಗೆ,
ನಾನೇ ನನ್ನ ಒಳಗೆ

ತಾರೆಗಳ ಗಡಣ, ಬಣ್ಣಗಳ ಜನನ,
ಶಬ್ದಗಳು ಸೇರಿಕೊಂಡು.
ರಾಸ ಲೀಲೆಯಲಿ, ಲಾಸ್ಯ ಮೋದದಲಿ,
ಎಲ್ಲ ಒಂದಕೊಂದು,                   
ಪ್ರೀತಿಯಾ ಮಿಂಚು, ಮಾತಿನ ಗುಡುಗು
ಕನಸುಗಳ ಮಳೆಯ ಹೊಳೆಯು
ಕೆರಳಿರಲು ಚಿತ್ತ, ಅರಳುವುದು ಹುತ್ತ
ನೀ ಕಂಡ ಕನಸು ಹಲವು..

ಎಳದೊಯ್ದ ಸುಳಿಯೂ, ನೆನಪಿನಾ ಸೆಳೆಯೂ
ಸಮನಾದ ಒಂದು ಘಳಿಗೆ,
ನಾ ಕರೆಯಬೇಕು, ನೀ ತಿರುಗಬೇಕು,
ಈ ಅಮರ ಕಮರಿನಿಡೆಗೆ
ಕಾಲನನು ಅಪ್ಪಿ, ಆಗಸವ ಸುತ್ತಿ
ಹರಸಿದರೆ ಒಮ್ಮೆ ಅವಗೆ,
ಮತ್ತೆ ಹೊಸ ಬದುಕು, ಬೇಕೆ ಹಳೆ ಸರಕು?
ಒಂಟಿತನವು* ನಮಗೆ.
-----------

*ಒಂಟಿತನ :  Singularity