Friday, December 31, 2010

ತಿಗಣೆಗಳ ಪರಿಷೆ

ತಿಗಣೆಗಳ ಪರಿಷೆ

ಕಲ್ಲಕೆತ್ತಿ, ಭಿತ್ತಿ ಬರೆಸಿ
ಮೆಲ್ಲನೆ ಅಮರನಾಗುವ ಹುಚ್ಚು
ಇಂದು-ನಿನ್ನೆಯದಲ್ಲ, ನಾಳೆ ಮುಗಿಯುವದಲ್ಲ
ಪರಿಷೆ ಬರುವ ಸಾವಿರ ತಿಗಣೆಗಳ
ಪ್ರತೀ ಸರದಾರಗೂ ಅಮರನಾಗುವ ಕನಸು
ಕೇಳಿರಬಹುದು ನೀವು,
ಹೊತ್ತಲ್ಲದ ಹೊತ್ತಲ್ಲೂ ಅರಚುವ
ಆಕಾಶವಾಣಿಯ ಬಿತ್ತರವ
"ಬಲ್ಲಿರೇನಯ್ಯಾ, ಬಲ್ಲಿರೇನಯ್ಯ,
ನಿನ್ನೆ-ನಾಳೆಗಳಿಗಿಂತ, ಇಂದಿನ ನಾನೇ ಅನಂತ"

ಕಂಡ-ಕಂಡ ಕಲ್ಲುಗಳ ಮೇಲೆಲ್ಲ ಕಂಡರಿಸಿ,
ಸೊಲ್ಲೆತ್ತಿದವರ ಸರಿಸಿ ಬದಿಗಿರಿಸಿ,
ಬರೆಸಿ, ಒರೆಸಿ, ಮತ್ತೊಮ್ಮೆ ಬರೆಸಿ,
ಬೆವರೊರೆಸುವಷ್ಟರಲ್ಲಿ ಮುಗಿದೇ ಹೋಯಿತೇ ವರುಷ,
ಮುಗಿದು ಹೋಯಿತೇ ಆ ಎರವಲಿನ ರಸನಿಮಿಷ!
ಸರತಿಯಲಿ ನಿಂತ ಆ ಅನಿಮಿಷರ ಗುಂಪು:
"ಅಯ್ಯೋ! ಈ ನಿಮಿಷ ಮುಗಿಯುವುದು ಎಂತು?
ವರುಷ ಕಳೆದೀತು ಜೋಪಾನ, ಅಮರತ್ವಕ್ಕಿದು ಸೋಪಾನ"
ಹಾಳೂರ ಪರಿಷೆಗೆ ಹೊಸ ತಿಗಣೆಗಳ ಸಾಲು,
ಹೊಸ ವರುಷ, ಹೊಸ ಸಾಲು, ಮತ್ತದೇ ಹಳೆಗೋಳು

No comments:

Post a Comment